ಮಹತ್ವದ ವಿಡಿಯೋ ಸಂವಾದ,ಸಭೆ:ಪ್ರಸಿದ್ಧ ಬಿದ್ರಿ ಕಲೆ,ಕರಕುಶಲಗಾರರ ಕಲ್ಯಾಣಕ್ಕೆ ಕ್ರಮವಹಿಸಲು ಚರ್ಚೆ
ಬೀದರ ಅಕ್ಟೋಬರ್ 6 (ಕರ್ನಾಟಕ ವಾರ್ತೆ):-ಗಡಿನಾಡು ಬೀದರ ಬಿದ್ರಿ ಕಲೆಯಿಂದಾಗಿಯೂ ರಾಷ್ಟ್ರಮಟ್ಟದಲ್ಲಿ ಹೆಸರಾಗಿದೆ. ಹಲವಾರು
ದಶಕಗಳಿಂದಲೂ ಬಿದ್ರಿ ಕಲಾಕೃತಿಗಳ ರಚನೆ ಕಾರ್ಯದಲ್ಲಿ
ತೊಡಗಿಸಿಕೊಂಡ ಅನೇಕರು ಕರ್ನಾಟಕ ಸರ್ಕಾರದ ಪ್ರಶಸ್ತಿ
ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಿಟ್ಟಿಸಿ ಬೀದರ
ಜಿಲ್ಲೆಯ ಕೀರ್ತಿ ಹಬ್ಬಿಸಿದ್ದಾರೆ.
ಇಂತಹ ಮಹತ್ವದ ಪಾರಂಪರಿಕ ಕಲೆಗಳಲ್ಲೊಂದಾದ ಪ್ರಸಿದ್ಧ
ಬಿದ್ರಿ ಕಲೆಗೆ ಪುನಶ್ಚೇತನ ಮತ್ತು ಈ ಬಿದ್ರಿ ಕಲೆಯ
ಕರಕುಶಲಗಾರರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು
ರೂಪಿಸುವ ಕುರಿತಂತೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ
ಪ್ರಾಧಿಕಾರದ ಅಧ್ಯಕ್ಷರಾದ ರತ್ನಪ್ರಭ ಅವರು ಹಾಗೂ
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಇತ್ತೀಚೆಗೆ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ವಿಡಿಯೋ ಸಂವಾದ
ಮತ್ತು ಸಭೆಯಲ್ಲಿ ಸಮಗ್ರ ಚರ್ಚಿಸಲಾಯಿತು.
ಸಿರಿಯಾ, ಇರಾನ್ ಮುಂತಾದ ಕಲೆಯ ಪ್ರಭಾವ: ಈ ಬಿದ್ರಿ ಕಲೆಗೆ
ಮೂಲ ಪ್ರೇರಣೆ ಸಿರಿಯಾ, ಇರಾನ್ ಮುಂತಾದ ಕಲೆ ಹಾಗೂ
ಕರಕುಶಲ ಕರ್ಮಿಗಳ ಪ್ರಭಾವ ಜೊತೆಗೆ ಆರಂಭದಿಂದಲೂ
ಬಿದ್ರಿ ಕಲೆಗೆ ಉಮರ್ಖಯಾಮ್, ರುಬಾಯಿಯತ್ ಶಿಲ್ಪ ಮಾದರಿಯ
ಪರ್ಶೀಯನ್ ಸಂಪ್ರದಾಯ ಅಚ್ಚೊತ್ತಿದೆ ಎಂದು ಹಲವಾರು.....
ಲೇಖಕರು ಬಿದ್ರಿ ಕಲೆಯ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
ಬೀದರನಲ್ಲಿ ಈಗ ಸಾವಿರಾರು ಸಂಖ್ಯೆಯಲ್ಲಿ ಬಿದ್ರಿಕಲೆಯ
ಕರಕುಶಲಗಾರರಿದ್ದಾರೆ. ಹಲವಾರು ಹೆಸರನ್ನು
ನೋಂದಾಯಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇನ್ನುಳಿದ
ಕರಕುಶಲಗಾರರು ಸ್ವತಂತ್ರವಾಗಿ ಬೀದರನಲ್ಲಿ ಮತ್ತು
ಹೈದ್ರಾಬಾದ್ ನಗರಗಳಲ್ಲಿ ನೆಲೆಸಿದ್ದಾರೆ.
ವಿಡಿಯೋ ಸಂವಾದ: ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷರಾದ ರತ್ನಪ್ರಭ ಅವರು, ಇತ್ತೀಚೆಗೆ ಬೀದರನ ಬಿದ್ರಿ
ಕಲೆಯ ಕರಕುಶಲಗಾರರೊಂದಿಗೆ ವಿಡಿಯೋ ಸಂವಾದ ನಡೆಸಿ
ಹಲವಾರು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಬಿದ್ರಿ ಕಲೆಯ
ಹಿರಿಯ ಕರಕುಶಲಗಾರರಾದ ರೆಹಮತ್ ಉಲ್ಲಾ ಹುಸೇನಿ
ರೇಖುಳಗಿ ಅವರು ಮಾತನಾಡಿ, ಬಿದ್ರಿ ಕಲಾಕೃತಿಗಳ
ಕಾರ್ಯವು ಅತ್ಯಂತ ಸೂಕ್ಷ್ಮವಿರುತ್ತದೆ. ಇದರಿಂದ ನಮ್ಮ
ಕಣ್ಣಿಗೆ ಸಾಕಷ್ಟು ಹಾನಿಯಾಗುತ್ತದೆ. ಹೀಗಾಗಿ ನೇತ್ರ ಚಿಕಿತ್ಸೆಗೆ
ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಹಾಜರಿದ್ದ ಬಿದ್ರಿ ಕಲೆಯ ಇನ್ನೀತರ ಹಿರಿಯ
ಕರಕುಶಲಗಾರರು ತಿಳಿಸಿದಂತೆ, ಅಂದಾಜು 2000 ಕಲಾ
ಪ್ರಕಾರದ ಬಿದ್ರಿ ಕಲಾಕೃತಿಗಳ ಪ್ರದರ್ಶನಕ್ಕೆ ಸ್ಥಳವಕಾಶ
ಕಲ್ಪಿಸುವ ಬಗ್ಗೆ ಹಾಗೂ ಪಾರಂಪರಿಕ ಬಿದ್ರಿ ಕಲೆಯ
ವಿಷಯವನ್ನು ಪಠ್ಯಕ್ಕೆ ಸೇರ್ಪಡೆಗೊಳಿಸಿ ತರಬೇತಿ ನೀಡುವ
ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ರತ್ನಪ್ರಭ ಅವರು, ಬೀದರ
ಜಿಲ್ಲೆಯಲ್ಲಿ ಬಿದ್ರಿ ಕಲೆಗೆ ವಿಶೇಷ ತರಬೇತಿ ಮತ್ತು ತರಬೇತಿ
ಹೊಂದುವ ಕಲಾವಿದರಿಗೆ ಪ್ರಮಾಣ ಪತ್ರಗಳನ್ನು ನೀಡಿ
ಪ್ರೋತ್ಸಾಹಿಸಲು ಮತ್ತು ಬಿದ್ರಿ ಕರಕುಶಲಗಾರರಿಗೆ
ಬ್ಯಾಂಕುಗಳಿಂದ ಸಮರ್ಪಕವಾಗಿ ಲೋನ್ ಸಿಗುವ ವ್ಯವಸ್ಥೆ
ಮಾಡಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ
ಮಾಡಿದರು.
ಬಿದ್ರಿ ಕಲೆಯ ಕರಕುಶಲಗಾರರೊಂದಿಗೆ ಸಭೆ: ವಿಡಿಯೋ
ಸಂವಾದದ ಬಳಿಕ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ
ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿದ್ರಿ ಕಲಾಕೃತಿಗಳ
ಮಾರಾಟಕ್ಕೆ ವಿಶೇಷ ವ್ಯವಸ್ಥೆ, ಬಿದ್ರಿ ಕಲಾವಿದರಿಗೆ ಸಹಾಯಧನ
ಕಲ್ಪಿಸುವುದು, ಹೊಸ ತಲೆಮಾರಿನ ಕಲಾವಿದರಿಗೆ ಬಿದ್ರಿ
ಕಲಾಕೃತಿಗಳ ಪರಿಚಯಿಸುವುದು, ಬಿದ್ರಿ ಕಲೆಗೆ ವಿಶೇಷ
ತರಬೇತಿ ಏರ್ಪಾಡು, ಬಿದ್ರಿ ಕಲೆಯ ಕುಶಲಕರ್ಮಿಗಳಿಗೆ
ಜಮೀನು ನೀಡುವುದು, ಬಿದ್ರಿ ವಸ್ತುಗಳ ಸಂಗ್ರಹಾಲಯ,
ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಬಿದ್ರಿ ಕಲಾಕೃತಿಗಳ
ಪ್ರದರ್ಶನ ಮತ್ತು ವಿಶೇಷ ಪ್ರಚಾರ ನೀಡುವುದು ಸೇರಿದಂತೆ
ನಾನಾ ವಿಷಯಗಳ ಕುರಿತಂತೆ ಹಲವಾರು ವಿಷಯಗಳನ್ನು
ಚರ್ಚಿಸಲಾಯಿತು....
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಗಡಿನಾಡು ಬೀದರ
ಜಿಲ್ಲೆಗೆ ಬಿದ್ರಿ ಕಲೆಯಿಂದಲೂ ವಿಶೇಷ ಮಾನ್ಯತೆ ಸಿಕ್ಕಿದೆ. ಹೀಗಾಗಿ ಈ
ಕಲೆಗೆ ಪುನಶ್ವೇತನ ಕೊಡಲು ಮತ್ತು ಬಿದ್ರಿ
ಕಲೆಯಂತಹ ಕಸುಬನ್ನೇ ನಂಬಿ ಬದುಕು ನಡೆಸುವಂತಹ
ಕರಕುಶಲಗಾರರ ಕಲ್ಯಾಣದ ಹಿನ್ನೆಲೆಯಲ್ಲಿ ಕಾರ್ಯಯೋಜನೆ
ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು. ಬಿದ್ರಿ
ಕರಕುಶಲಗಾರರ ಬೇಡಿಕೆಯಂತೆ 2000 ಕ್ಕೂ ಹೆಚ್ಚಿನ ಬಿದ್ರಿ
ಕಲಾ ಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಸ್ಥಳವಕಾಶ
ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಕಲಾವಿದರಿಗೆ 1
ಲಕ್ಷ ರೂ.ಗಳ ಸಹಾಯಧನ ಒದಗಿಸುವುದು, ಬಿದ್ರಿ
ಕಲಾಕೃತಿಗಳಿಗೆ ವಿಶೇಷ ವೆಬ್ಸೈಟ್ ರಚನೆ, ಕಲಾವಿದರಿಗೆ
ಮಾಸಾಶನ ಅದಾಲತ್, ಆರೋಗ್ಯ ಕಾರ್ಯಕ್ರಮಗಳನ್ನು ರೂಪಿಸಿ
ಬಿದ್ರಿ ಕಲೆಯ ಕಸುಬುದಾರರಿಗೆ ಅನುಕೂಲ ಕಲ್ಪಿಸಿಕೊಡುವ
ಹಲವಾರು ವಿಷಯಗಳ ಕುರಿತಂತೆ ಜಿಲ್ಲಾಧಿಕಾರಿಗಳು, ಬೀದರ
ಸಹಾಯಕ ಆಯುಕ್ತರಾದ ಗರೀಮಾ ಪನವಾರ, ಕರ್ನಾಟಕ
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ
ನಿರ್ದೇಶಕರಾದ ಅಕ್ಬರ್ ಖಾನ್, ಕೌಶಲ್ಯ ಅಭಿವೃದ್ಧಿ ಅಧಿಕಾರಿ
ಲಕ್ಷ್ಮಿಕಾಂತ ಅವರೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಬಿದ್ರಿ ಆರ್ಟಿಸಂ ಅಶೋಸಿಯೇಶನ್ ಅಧ್ಯಕ್ಷರಾದ
ಮೊಹಮ್ಮದ್ ಸಲಿಯುದ್ದೀನ್, ಕಾರ್ಯದರ್ಶಿ ಸಯಿದ್ ಎಂ.ಡಿ.,
ಸದಸ್ಯರಾದ ಉಬೆದುಲ್ಲಾ ಖಾನ್, ಮಹಮ್ಮದ್ ಸಲಾವುದ್ದೀನ್,
ಸುನೀಲಕುಮಾರ, ಇದ್ರಿಜ್, ಅಬ್ದುಲ್ ಸಮದ್, ಮಹಮ್ಮದ್ ನದೀಪ,
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಬೆಬಿ
ಎಂ., ವಾರ್ತಾ ಇಲಾಖೆಯ ಅಧಿಕಾರಿ ಗವಿಸಿದ್ದಪ್ಪ ಹಾಗೂ ಇತರರು
ಇದ್ದರು.





No comments:
Post a Comment