ಕೌಠಾ ಸೇತುವೆ ವೀಕ್ಷಿಸಿದ ಸಚಿವರು, ಆಣದೂರ್ನಲ್ಲಿ ಬೆಳೆ ಹಾನಿ
ಪರಿವೀಕ್ಷಣೆ
ರೈತರಿಗೆ ಅನ್ಯಾಯವಾಗಲು
ಬಿಡುವುದಿಲ್ಲ: ಸಚಿವ ಪ್ರಭು ಚವ್ಹಾಣ್.
ಬೀದರ, ಅ.16:- ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ
ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಶುಕ್ರವಾರ
ಔರಾದ ತಾಲೂಕಿನ ಕೌಠಾ ಸೆತುವೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿದ ಸಚಿವರು, ಅವರಿಂದ
ಬೆಳೆ ಹಾನಿಯ ಕುರಿತು ವಿವರಣೆ ಪಡೆದರು. ಅನಿರೀಕ್ಷಿತವಾಗಿ ಸುರಿದ ಭಾರಿ
ಮಳೆಯಿಂದಾಗಿ ನೀರಿನ ಮಟ್ಟ ಏರಿಕೆಯಾಗಿದ್ದು, ಸೇತುವೆಯ
ಸುತ್ತಮುತ್ತಲಿನ ಹೊಲಗಳಲ್ಲಿ ನೀರು ನುಗ್ಗಿ ಸಾಕಷ್ಟು
ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ನೀರಿನ ರಭಸಕ್ಕೆ ಕಟಾವಿಗೆ ಬಂದಿದ್ದ
ಸೋಯಾಬಿನ್ ನೀರು ಪಾಲಾಗಿದ್ದು, ಲಕ್ಷಾಂತರ ರೂಪಾಯಿ ಹಾನಿ
ಸಂಭವಿಸಿದೆ. ದಯವಿಟ್ಟು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು
ರೈತರು ಸಚಿವರಲ್ಲಿ ಮನವಿ ಮಾಡಿದರು.
ಬಳಿಕ ಜಿಲ್ಲೆಯ ಆಣದೂರ ಗ್ರಾಮದಲ್ಲಿ ರೈತರ ಕೃಷಿ
ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿಯ ಬಗ್ಗೆ ಖುದ್ದು ಪರಿವೀಕ್ಷಣೆ
ನಡೆಸಿದರು. ತೀವ್ರ ಮಳೆಯಿಂದಾಗಿ ರೈತರೊಬ್ಬರ ಜಮೀನಿನಲ್ಲಿ
ಕಬ್ಬು ಸಂಪೂರ್ಣ ನೆಲಕ್ಕೆ ಉರುಳಿರುವುದನ್ನು ಗಮನಿಸಿದರು.
ಬಳಿಕ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕಳೆದ ಕೆಲವು
ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಹಾನಿ ಸಂಭವಿಸಿರುವ
ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರಿಗೆ ಮನವರಿಕೆ
ಮಾಡಿದ್ದೇನೆ. ಅದರಂತೆ ಈಗಾಗಲೇ ಬೀದರ ಜಿಲ್ಲೆಯ ಎಲ್ಲಾ
ತಾಲೂಕುಗಳನ್ನು ಅತಿವೃಷ್ಟಿ ಪೀಡಿತ ಪ್ರದೇಶಗಳೆಂದು
ಘೋಷಣೆ ಮಾಡಲಾಗಿದೆ. ಸರ್ಕಾರವು ರೈತರ ಪರವಾಗಿದ್ದು,
ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.
ಎಲ್ಲರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಸರ್ಕಾರ ಮಾಡುತ್ತಿದೆ.
ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ
ಒಳಗಾಗಬಾರದು. ಸಮಗ್ರ ವರದಿಯನ್ನು ಸಂಗ್ರಹಿಸಿ....
ಶೀಘ್ರದಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ
ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು
ಜಂಟಿಯಾಗಿ ಹಾನಿ ಬಗ್ಗೆ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಸರ್ವೇ
ಕಾರ್ಯ ಚುರುಕುಗೊಳಿಸುವಂತೆಯೂ ನಿರ್ದೇಶನ ನೀಡಲಾಗಿದೆ.
ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸಮೀಕ್ಷಾ
ಕಾರ್ಯದಲ್ಲಿ ಲೋಪಗಳು ಜರುಗಿದಲ್ಲಿ ಸಂಬಂಧಿಸಿದವರ ವಿರುದ್ಧ
ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಈ
ಸಂದರ್ಭದಲ್ಲಿ ಮುಖಂಡರು, ಅಧಿಕಾರಿಗಳು ಹಾಗೂ ಸ್ಥಳೀಯ
ನಾಗರಿಕರು ಉಪಸ್ಥಿತರಿದ್ದರು.





No comments:
Post a Comment