ರೈತರ ಕ್ರಿಯಾಯೋಜನೆ ಅಭಿಯಾನ
ಕಾರ್ಯಕ್ರಮ ಪ್ರಚಾರಕ್ಕೆ ಸಿಇಓ ಚಾಲನೆ
ಬೀದರ ಅಕ್ಟೋಬರ್ 7 (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ ಗಂಗವಾರ
ಅವರು ಅಕ್ಟೋಬರ್ 7ರಂದು ಬೀದರ ತಾಲೂಕು ಪಂಚಾಯತ್
ಕಚೇರಿ ಆವರಣದಲ್ಲಿ ರೈತರ ಕ್ರಿಯಾಯೋಜನೆ ಅಭಿಯಾನ
ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಹಸಿರುನಿಶಾನೆ ತೋರಿದರು.
ಈ ವೇಳೆ ಮಾತನಾಡಿದ ಸಿಇಓ ಅವರು, ಸರ್ಕಾರದ ಗ್ರಾಮೀಣಾಭಿವೃದ್ಧಿ
ಪಂಚಾಯತ್ ರಾಜ್ಯ ಇಲಾಖೆಯು ರೈತರ ಅಭಿವೃದ್ಧಿಗಾಗಿ ಸಾಕಷ್ಟು
ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಸರ್ಕಾರವು
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆಯಡಿ 2021-22ನೇ ಸಾಲಿಗೆ ಕಾರ್ಮಿಕ ಆಯವ್ಯಯ
ತಯಾರಿಸುವ ಸಲುವಾಗಿ ಅಕ್ಟೋಬರ್ 2ರಿಂದ ಎಲ್ಲ ಗ್ರಾಮ
ಪಂಚಾಯತಗಳಲ್ಲಿ ರೈತರಿಗೋಷ್ಕರ ರೈತರ
ಕ್ರಿಯಾಯೋಜನೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ
ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ವೈಯಕ್ತಿಕ
ಕಾಮಗಾರಿಯನ್ನು ಕೈಗೊಳ್ಳಲು ಆಸಕ್ತಿ ಇರುವ ರೈತರು
ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು
ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬೀದರ ತಾಲೂಕಿನ ಎಲ್ಲ ಪಂಚಾಯತಗಳಲ್ಲಿ ಈ ಕಾಮಗಾರಿ ಬೇಡಿಕೆ
ಅಭಿಯಾನಕ್ಕೆ ಚಾಲನೆ ಮತ್ತು ಅನುಷ್ಠಾನ ಪ್ರಕ್ರಿಯೆಯು
ಅಕ್ಟೋಬರ್ 2ರಿಂದಲೇ ಜಾರಿಯಾಗಿದ್ದು ಅಕ್ಟೋಬರ್ 15ರವರೆಗೆ
ಅವಕಾಶ ಕಲ್ಪಿಸಲಾಗಿದೆ. ರೈತರು ಈ ಯೋಜನೆಯ
ಸದುಪಯೋಗಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ
ಹತ್ತಿರದ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು ಎಂದು
ತಿಳಿಸಿದರು.....
ಈ ಸಂದರ್ಭದಲ್ಲಿ ಬೀದರ ತಾಪಂ ಅಧ್ಯಕ್ಷರಾದ ವಿಜಯಕುಮಾರ
ರಾಮುಲು ಬರೂರು, ಜಿಲ್ಲಾ ಪಂಚಾಯತ್ ಸಹಾಯಕ
ಕಾರ್ಯದರ್ಶಿಗಳಾದ ಮಡೋಳಪ್ಪ ಪಿ.ಎಸ್., ಬೀದರ ತಾಪಂ
ಕಾರ್ಯನಿರ್ವಹಣಾಧಿಕಾರಿಗಳಾದ ಧನರಾಜ್ ಬೋರಾಳೆ, ಜಿಪಂ
ನೋಡಲ್ ಅಧಿಕಾರಿ ಮಾರುತಿರಾವ್ ಜಾಬೋನರ್ ಮತ್ತು ತಾಪಂನ
ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ
ಶರತಕುಮಾರ ಹಾಗೂ ಇತರರು ಇದ್ದರು.
ಕರ್ನಾಟಕ ವಾರ್ತೆ




No comments:
Post a Comment